ಸೋಮವಾರವೆಂದರೆ ಭಾನುವಾರದ ಹ್ಯಾಂಗೋವರ್. ‘ಬೋರಿಂಗ್.. ಬೋರಿಂಗ್..’ ಎಂದು ಸಾಫ್ಟ್ವೇರ್ ಕಂಪೆನಿಯಲ್ಲಿ ಕೂತ ಆತ ಆಕಳಿಸುತ್ತಿದ್ದಾಗಲೇ ಜೇಬಲ್ಲಿದ್ದ ಮೊಬೈಲ್ ರಿಂಗ್ ಆಯ್ತು. ಖುಷಿಯಾಗಿ ‘ಹಲೋ’ ಎಂದರೆ, ಆ ಕಡೆಯಿಂದ ಅಪರಿಚಿತ ಹೆಣ್ಣು ಸ್ವರ ‘ಹೆಲೋ್ಲ’ ಎಂದು ಉಲಿಯಿತು. ‘ಸರ್, ನಾನು ಎಡಿಎಸಿಸಿ ಬ್ಯಾಂಕ್ನಿಂದ ಮಾತನಾಡೋದು. ನಮ್ಮ ಹೊಸ ಗೋಲ್ಡನ್ ಕ್ರೆಡಿಟ್ ಕಾರ್ಡ್ಗೆ ಒಳ್ಳೆಯ ಆಫರ್ ಇದೆ ಸರ್. ಮಾಸಿಕ ಮಿತಿ ಹೆಚ್ಚಳ, ಬಡ್ಡಿದರ ಕಡಿಮೆ. ಇನ್ನೂ ಏನೇನೆಲ್ಲಾ.. ಸರ್, ಒಂದೆರಡು ನಿಮಿಷ ಫ್ರೀ ಇದೀರಾ? ಒಂದಿಷ್ಟು ವಿವರ...’ ‘ಓ ಖಂಡಿತ. ನೋಡಿ, ನಂಗೆ ಈ ಕ್ರೆಡಿಟ್ ಕಾರ್ಡ್ ಅಗತ್ಯ ಎಷ್ಟಿದೆ ಎಂದ್ರೆ ನಾನೇ ಕಾಲ್ ಮಾಡುವವನಿದ್ದೆ. ಅಷ್ಟರಲ್ಲಿ ನೀವೇ ಮಾಡಿಬಿಟ್ರಿ. ಆದ್ರೆ ನಂಗೆ 5 ಗಂಟೆಗೆ ಮೀಟಿಂಗ್ ಇದೆ. ಇರಲಿ, ಈಗಿನ್ನೂ 2 ಗಂಟೆ. ಹೇಳಿ ಹೇಳಿ’ ಈತ ಮೊಬೈಲನ್ನು ಕಿವಿಗೊತ್ತಿ ರೆಡಿಯಾಗಿಬಿಟ್ಟ. ‘ಓ ತುಂಬಾ ಥ್ಯಾಂಕ್ಸ್ ಸರ್. ಈ ಕಾರ್ಡ್ ನಿಮಗೆ ಎಷ್ಟೊಂದು ಪ್ರಯೋಜನಕಾರಿ ಅಂದ್ರೆ ಬಳಸಿದಷ್ಟೂ ಡಿಸ್ಕೌಂಟ್, ಜೇಬೆಲ್ಲಾ ಖಾಲಿ ಇದ್ರೂ ಷಾಪಿಂಗ್ ಮಾಡಬಹ್ದು....’ ‘ಓಕೆ, ತುಂಬಾ ಒಳ್ಳೇದು, ನಂಗದೇ ಬೇಕು’ ‘ಇಎಂಐ ಕೂಡಾ ತುಂಬಾ ಆಕರ್ಷಕ ಸರ್...’ ‘ವಾವ್!’ ಹೀಗೆ ಸಾಗಿತು ಕಾರ್ಡ್ನ ಗುಣಗಾನ. ಅದೂ ಬರೋಬ್ಬರಿ ಎರಡೂವರೆ ಗಂಟೆ ಕಾಲ. ಕೊನೆಗೆ ಆಕೆ ಇದ್ದಬದ್ದ ಮಾಧುರ್ಯವನ್ನೆಲ್ಲ ಸ್ವರದಲ್ಲಿ ಬೆರೆಸಿ ಕೇಳಿದಳು, ‘ಸರ್, ಆ ಕಾರ್ಡ್ ಬೇಕಲ್ಲ ನಿಮಗೆ?’ ‘ಆಫರ್ ತುಂಬಾ ಚೆನ್ನಾಗಿದೆ. ಆದರೆ ನಂಗೆ ಯೋಚಿಸಲು ಟೈಂ ಕೊಡಿ. ಅರೆ, ನಾಲ್ಕೂವರೆ ಆಗೇ ಬಿಡ್ತಲ್ಲ. ಮೀಟಿಂಗ್ಗೆ ಹೋಗಬೇಕು. ನೀವೇನೂ ತಿಳಿದುಕೊಳ್ಳದಿದ್ದರೆ ನಾಳೆ ನನ್ನ ನಿರ್ಧಾರ ಹೇಳಲಾ?’ ‘ನೋ ಪ್ರಾಬ್ಲಂ ಸರ್. ನಾಳೆ ಫೋನ್ ಮಾಡ್ತೇನೆ. ಹ್ಯಾವ್ ಎ ನೈಸ್ ಡೇ’ ಮರುದಿನವೂ ಅದೇ ಟೈಮಿನಲ್ಲಿ ಫೋನ್ ಬಂತು. ಬೇರೆ ಬ್ಯಾಂಕಿನ ಕಾರ್ಡಿನ ಜೊತೆ ಆಕೆ ಆಫರ್ ಮಾಡಿರುವ ಎಡಿಎಸಿಸಿ ಬ್ಯಾಂಕ್ ಕಾರ್ಡನ್ನು ಹೋಲಿಸಿ ವಿವರಿಸಲು ಕೇಳಿದ. ಆಕೆ ವಿವಿಧ ಅಂಕಿ- ಅಂಶ, ವೆಬ್ಸೈಟ್ ಎಲ್ಲವನ್ನೂ ಜಾಲಾಡಿ ವಿವರಿಸಿದ್ದೇ ವಿವರಿಸಿದ್ದು. ಒಂದೂವರೆ ತಾಸು ಕಾರ್ಡಿನ ಪ್ರವರ ಸಾಗಿತು. ‘ಓ ತುಂಬಾ ಚೆನ್ನಾಗಿದೆ. ಆದರೆ ನಾನೊಬ್ಬ ಎಂಜಿನಿಯರ್. ಯಾವ ವಸ್ತುವಿನಲ್ಲೂ ಕುಂದಿರಬಾರದು ನೋಡಿ. ನಾಳೆ ಮತ್ತೆ ಫೋನ್ ಮಾಡಿ ಕಾರ್ಡ್ನಲ್ಲಿರುವ ರಿಸ್ಕ್ ಫ್ಯಾಕ್ಟರ್ ವಿವರಿಸಿದ್ರೆ ಒಳ್ಳೆಯದಿತ್ತು’ ‘ಓಕೆ ಸರ್, ನೋ ಪ್ರಾಬ್ಲಂ’ ಎಂದಾಕೆಯ ದನಿಯಲ್ಲಿ ಸ್ವಲ್ಪ ಅಸಹನೆ ಇತ್ತು. ನಂತರದ ಎರಡು ದಿನಗಳ ಕಾಲ ಮತ್ತೆ ಆಕೆ ಫೋನ್ ಮಾಡಿ ರಿಸ್ಕ್, ಮುಂದೆ ಕಾರ್ಡ್ಗೆ ಹೆಚ್ಚಿಸುವ ಹಣದ ಮಿತಿ, ವಿದೇಶಗಳಿಗೆ ಹೋದರೆ ಏನು ಪ್ರಯೋಜನ ಸಿಗುತ್ತದೆ ಎಂದೆಲ್ಲ ವಿವರಿಸಿದಳು. ‘ಸರ್, ಈಗ ನಮ್ಮ ಕಾರ್ಡ್ ತೆಗೆದುಕೊಳ್ಳಬಹುದಲ್ಲ?’ ‘ಆಫರ್ ಏನೋ ಚೆನ್ನಾಗಿದೆ. ಆದರೆ ಸದ್ಯಕ್ಕೆ ನನಗೆ ಆ ಕಾರ್ಡ್ ಬೇಡ. ಐ ಆ್ಯಮ್ ಸ್ಸಾರಿ’ ‘ಆದರೆ ಸರ್, ನೀವು ಆವತ್ತು ಕಾರ್ಡ್ ಅಗತ್ಯವಿದೆ ಅಂದ್ರಲ್ಲ..’ ‘ಹೌದು, ಅವತ್ತು ಇತ್ತು; ಆದ್ರೆ ಈಗಿಲ್ಲ’ ನಿರಾಶೆಯಾದರೂ ಆಕೆ ಎಂದಳು, ‘ಓಕೆ, ಆದ್ರೆ ನಾನು ನಿಮಗೆ ಒಂದು ಫಾರ್ಮ್ ಕಳಿಸ್ತೇನೆ. ಅದ್ರಲ್ಲಿ ಕಾರ್ಡ್ ಏಕೆ ಬೇಡ ಎಂಬುದಕ್ಕೆ ಕಾರಣ ನಮೂದಿಸಿ ಬಿಡಿ. ನಾನು ಅದನ್ನು ನಮ್ಮ ಬಾಸ್ಗೆ ಕೊಡಬೇಕು’ ಓಕೆ ಎಂದನಾತ. ಮರುದಿನ ಆತ ತುಂಬಿ ಕಳಿಸಿದ ಫಾರ್ಮ್ ಓದಿದ ಆಕೆಗೆ ಕೊಂಚ ಸಿಟ್ಟೇ ಬಂತು. ಜೊತೆಗೆ ಅಚ್ಚರಿ. ‘ಬೇಡ ಎನ್ನಲು ಕಾರಣ’ ಎಂದಿದ್ದ ಕಡೆ, ‘ನನ್ನ ಹೆಂಡತಿ ತವರಿನಿಂದ ವಾಪಸ್ಸು ಬಂದಿದ್ದರಿಂದ ಅದು ನನಗೆ ಬೇಕಿಲ್ಲ’ ಎಂದು ಬರೆದಿದ್ದ. ಗೊಂದಲಗೊಂಡ ಆಕೆ ಫೋನಾಯಿಸಿ ಕೇಳೇ ಬಿಟ್ಟಳು, ‘ಸರ್, ಕಾರ್ಡ್ ಬೇಡ ಎಂದಿದ್ದಕ್ಕೆ ನೀಡಿದ ಕಾರಣ ನನಗೆ ಅರ್ಥ ಆಗಲಿಲ್ಲ, ದಯವಿಟ್ಟು ವಿವರಿಸ್ತೀರಾ?’ ‘ಓ ಅದಾ! ನಾನು ಹೊಸ ಡರ್ಬಿನ್ ಮೊಬೈಲ್ ಸಿಮ್ ಖರೀದಿಸಿದ್ದೇನೆ. ಪ್ರತಿಯೊಂದು ಒಳ ಬರುವ ಕರೆಗೂ ಒಂದು ನಿಮಿಷಕ್ಕೆ 20 ಪೈಸೆ ನನ್ನ ಅಕೌಂಟ್ಗೆ ಸೇರುತ್ತೆ. ನೀವು ಫೋನ್ ಮಾಡಿದಾಗ ಪ್ರತಿ ದಿನ ನನಗೆ ಸರಾಸರಿ 25 ರೂಪಾಯಿ ಬಂದಿದೆ. ನಾನದನ್ನು ತವರಿನಲ್ಲಿರುವ ಹೆಂಡತಿಗೆ ಫೋನ್ ಮಾಡಲು ಬಳಸಿದೆ. ಈಗ ಆಕೆ ವಾಪಸ್ಸು ಬಂದಿದ್ದಾಳೆ. ನಿಮ್ಮ ಕ್ರೆಡಿಟ್ ಕಾರ್ಡ್ ನಿಜವಾಗಲೂ ನನ್ನ ಸಿಮ್ಗೆ ಹಣ ಕ್ರೆಡಿಟ್ ಮಾಡ್ತು. ತುಂಬ ಉಪಯೋಗವಾಯ್ತು’ ಎಂದನಾತ!
ವಾಸ್ಕೋ ಡ ಗಾಮ ಯಾರು? ಸಮುದ್ರದ ಹಾದಿಯಲ್ಲಿ ಭಾರತ ತಲುಪುವ ಮಾರ್ಗ ಕಂಡುಹಿಡಿದ ಪೋರ್ಚುಗೀಸ್ ನಾವಿಕ.
ಅವನ ಹಡಗಿನ ಹೆಸರೇನು? ಸಾವೋ ಗೇಬ್ರಿಯಲ್. ಭಾರತಕ್ಕೆ ನೌಕಾಮಾರ್ಗ ಕಂಡುಹಿಡಿಯುವಲ್ಲಿ ಇನ್ನೂ ಕೆಲವು ಹಡಗುಗಳ ನೆರವನ್ನು ಅವನು ಪಡೆದುಕೊಂಡ.
ಹಡಗುಗಳು ಭಾರತದತ್ತ ಯಾನ ಆರಂಭಿಸಿದ್ದು ಎಂದು? ಜುಲೈ 8, 1497, ಶನಿವಾರ.
ಭಾರತದ ಯಾವ ಜಾಗವನ್ನು ವಾಸ್ಕೋ ಡ ಗಾಮ ತಲುಪಿದ? ಕಲ್ಲಿಕೋಟೆಯ ಕೋಯಿಕ್ಕೋಡ್ ಅವನು ಮೊದಲು ಕಾಲಿಟ್ಟ ಜಾಗ. ಮೇ 22, 1498ರಂದು ಅವನು ಕೋಯಿಕ್ಕೋಡ್ ತಲುಪಿದ. ಪೂರ್ವ ಆಫ್ರಿಕಾದ ಪೈಲಟ್ ಒಬ್ಬರು ಭಾರತದ ಪಶ್ಚಿಮ ಕರಾವಳಿಯ ದಾರಿಯನ್ನು ಅವನಿಗೆ ತೋರಿಸಿದರು.
ಎರಡನೇ ಬಾರಿ, ಅಂದರೆ 1500ರಲ್ಲಿ ಮತ್ತೆ ವಾಸ್ಕೋ ಡ ಗಾಮ ಭಾರತಕ್ಕೆ ಬಂದದ್ದು ಏಕೆ? ಮೊದಲ ಸಲ ಅವನು ಭಾರತಕ್ಕೆ ಬಂದಾಗ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿತ್ತು. ಹಾಗಾಗಿ ತರಾತುರಿಯಲ್ಲಿ ಅವನು ಇಲ್ಲಿಂದ ಹೊರಟುಬಿಟ್ಟ. ತನ್ನ ಉದ್ದೇಶ ಸರಿಯಾದದ್ದು ಎಂಬುದನ್ನು ಮನದಟ್ಟು ಮಾಡಿಸುವ ಸಲುವಾಗಿ ಅವನು 1500ರಲ್ಲಿ ಸಾಕಷ್ಟು ಸಹ ನೌಕಾಯಾನಿಗಳೊಟ್ಟಿಗೆ ಬಂದಿಳಿದ.
ಮಾಲ್ಟಾ ಮಿಲಿಟರಿ ಗಣರಾಜ್ಯ ವಿಶ್ವದಲ್ಲೇ ಅತಿ ಚಿಕ್ಕ ಪ್ರಜಾಪ್ರಭುತ್ವ ಆಡಳಿತ ಹೊಂದಿದೆ. ಸರಿ. ಸೇಂಟ್ ಜಾನ್ಆಫ್ ರೋಡ್ಸ್ ಹಾಗೂ ಮಾಲ್ಟಾದ ಮಿಲಿಟರಿ ಗಣರಾಜ್ಯ ಎಂಬುದು ಈ ಪ್ರದೇಶದ ಪೂರ್ಣ ಹೆಸರು. ಇಟಲಿಯ ರೋಮ್ನಲ್ಲಿ ಇದರ ಎರಡು ಪ್ರಧಾನ ಕಚೇರಿಗಳಿವೆ. ಪ್ರಧಾನಿಗೆ ಸಮಾನವಾದ ಹುದ್ದೆಗೆ ಇಲ್ಲಿ ‘ಗ್ರ್ಯಾಂಡ್ ಮಾಸ್ಟರ್’ ಎಂದು ಹೆಸರು. ಜೀವಿತಾವಧಿಗೆ ವ್ಯಕ್ತಿಯೊಬ್ಬ ಈ ಹುದ್ದೆಗೆ ಆಯ್ಕೆಯಾಗುವುದು ವಿಶೇಷ. 102 ದೇಶಗಳ ಜೊತೆ ದ್ವಿಪಕ್ಷೀಯ ಸಂಬಂಧ ಹೊಂದಿರುವ ಮಾಲ್ಟಾ, ತನ್ನದೇ ಪಾಸ್ಪೋರ್ಟ್ ಹಾಗೂ ಸ್ಟಾಂಪ್ಗಳನ್ನೂ ವಿತರಿಸುತ್ತದೆ.
ಉದಯಿಸುವ ಸೂರ್ಯನ ಮೊದಲ ಕಿರಣಗಳನ್ನು ಪಡೆಯುವ ಭಾರತದ ರಾಜ್ಯ ಅಸ್ಸಾಂ. ತಪ್ಪು. ಸೂರ್ಯ ಉದಯವಾದಾಗ ಮೊದಲ ಕಿರಣ ತಾಕುವ ಭಾರತದ ರಾಜ್ಯ ಅರುಣಾಚಲ ಪ್ರದೇಶ. ‘ಬೆಳಗು ಸವರಿದ ಬೆಟ್ಟಗಳ ರಾಜ್ಯ’ ಎಂದೇ ಇದು ಹೆಸರುವಾಸಿಯಾಗಿದೆ. ವಿಶ್ವದಲ್ಲೇ ಸೂರ್ಯನ ಮೊದಲ ಕಿರಣಗಳು ಸೋಕುವ ಪ್ರದೇಶವೆಂದರೆ ಡೋಂಗ್ ಕಣಿವೆ.
ಎರೆಹುಳುವನ್ನು ಅರ್ಧಕ್ಕೆ ಕತ್ತರಿಸಿದರೆ ಪ್ರತಿ ಭಾಗವೂ ಪ್ರತ್ಯೇಕ ಹುಳುವಾಗಿ ಬೆಳೆಯುತ್ತದೆ. ತಪ್ಪು. ಅನೇಕ ಜಾತಿಯ ಹುಳುಗಳ ಬಾಲದ ಭಾಗ ತುಂಡಾದರೆ, ಅದು ಮತ್ತೆ ಬೆಳೆಯುತ್ತದೆ. ಹಕ್ಕಿಗಳ ದಾಳಿಯಿಂದಲೋ, ಕಾಲ್ತುಳಿತದಿಂದಲೋ ಹೀಗೆ ಆಗುವುದು ಸಾಮಾನ್ಯ. ತುಂಡಾಗುವ ಬಾಲ ಮತ್ತೆ ಬೆಳೆಯುತ್ತದೆ ಎಂಬುದೇನೋ ಸತ್ಯ. ಆದರೆ, ಹಾಗೆ ತುಂಡಾದ ಬಾಲಕ್ಕೆ ತಲೆ ಖಂಡಿತ ಮೂಡುವುದಿಲ್ಲ. ಹಾಗಾಗಿ ಆ ಭಾಗ ಮೃತ ಎಂದೇ ಅರ್ಥ. ವಿಶ್ವದ ಎಲ್ಲಾ ಇರುವೆಗಳ ತೂಕವು ಭೂಮಿ ಮೇಲಿನ ಮನುಷ್ಯರ ತೂಕಕ್ಕೆ ಸಮ. ಈ ಹೇಳಿಕೆ ಸತ್ಯ. ಕೀಟಶಾಸ್ತ್ರಜ್ಞ ಇ.ಒ.ವಿಲ್ಸನ್ ನಡೆಸಿರುವ ಸಂಶೋಧನೆ ಇದನ್ನು ದೃಢಪಡಿಸಿದೆ. ಭೂಮಿ ಮೇಲೆ ಅಂದಾಜು ಹತ್ತು ಶತಕೋಟಿ ಇರುವೆಗಳಿವೆ. ಅವುಗಳೆಲ್ಲವುಗಳ ತೂಕ ಮನುಷ್ಯರ ತೂಕಕ್ಕೆ ಸರಿಸಮನಾಗಬಲ್ಲದು. ಯಾಕೆಂದರೆ, 16 ಲಕ್ಷ ಇರುವೆಗಳ ತೂಕ ಒಬ್ಬ ಮನುಷ್ಯನ ತೂಕಕ್ಕೆ ಸಮ.
ಅದೋ... ಪಟದ ಹಡಗು
ಸಮುದ್ರಗಳಲ್ಲಿ ಅನೇಕ ಬೃಹತ್ ಹಡಗುಗಳು ನಿತ್ಯವೂ ಸಂಚರಿಸುತ್ತವೆ. ಲಕ್ಷಗಟ್ಟಲೆ ಟನ್ ಇಂಧನವನ್ನು ಬಳಸುವ ಅವು ವಿಷಕಾರಿ ಅನಿಲವನ್ನು ಹೊರಸೂಸುತ್ತವೆ. ಪರಿಸರ ಮಾಲಿನ್ಯದ ಕೊಡುಗೆಯಲ್ಲಿ ಇದಕ್ಕೇ ಮೂರನೇ ರ್ಯಾಂಕ್! ಜರ್ಮನ್ನ ಎಂಜಿನಿಯರ್ಗಳು ಇದನ್ನು ತಪ್ಪಿಸಲು ಬೃಹತ್ ಗಾಳಿಪಟ ಹಾಕಿದ ಹಡಗುಗಳನ್ನು ಅಭಿವೃದ್ಧಿಪಡಿಸಿದ್ದು, ಅವು ಗಾಳಿಯಿಂದ ಚಲಿಸಬಲ್ಲವು. ‘ಏರೋಡೈನಾಮಿಕ್ಸ್’ ತತ್ವದ ಆಧಾರದ ಮೇಲೆ ವಿಜ್ಞಾನಿಗಳು ಈ ಹಡಗನ್ನು ಅಭಿವೃದ್ಧಿಪಡಿಸಿದ್ದಾರೆ. ಇಂಗಾಲದ ಫೈಬರ್ನಿಂದ ತಯಾರಿಸಿದ ದಪ್ಪನೆಯ ಜವಳಿಯನ್ನು ಉಪಯೋಗಿಸಿ ದೊಡ್ಡ ಗಾಳಿಪಟ ಸಿದ್ಧಪಡಿಸಿದ್ದಾರೆ. ಗಾಳಿಗೊಡ್ಡಿಕೊಂಡಾಗ ಈ ಪಟದ ಮೇಲ್ಮೈನ ಅಗಲ ಒಂದು ಫುಟ್ಬಾಲ್ ಕ್ರೀಡಾಂಗಣಕ್ಕೆ ಸಮನಾಗಿರುತ್ತದೆ! 500 ಮೀಟರ್ ಎತ್ತರದವರೆಗೆ ಪಟ ಹಾರಬಲ್ಲದು. ಗಾಳಿಯ ಚಲನೆಗೆ ತಕ್ಕಂತೆ ಹಡಗಿನ ವೇಗವನ್ನು ನಿಯಂತ್ರಿಸುವ ಉಪಕರಣವೂ ಪಟದ ಕೆಳಭಾಗದಲ್ಲಿ ಇರುತ್ತದೆ. ಅದನ್ನು ಹಡಗಿನ ನಿಯಂತ್ರಣ ಕೋಣೆಯಲ್ಲಿರಿಸಿದ ಕಂಪ್ಯೂಟರ್ನೊಟ್ಟಿಗೆ ಸಂಪರ್ಕಿಸಿರುತ್ತಾರೆ. ಬೃಹತ್ ಪಟದ ಹಡಗುಗಳನ್ನು ಈಗಾಗಲೇ ಪ್ರಯೋಗಾರ್ಥವಾಗಿ ಸಮುದ್ರಗಳ ಮೇಲೆ ಸಂಚರಿಸಿ ಆಗಿದೆ. ಫಲಿತಾಂಶ ಉತ್ತಮವಾಗಿಯೇ ಇದೆ.
ಮರಗಳ ಮೇಲೆ ಓಡುವ ಅಳಿಲು ನಮಗೆ ಪರಿಚಿತ ಪ್ರಾಣಿ. ಸಾಕಷ್ಟು ರೀತಿಯ ಅಳಿಲುಗಳಿವೆ. ಇಲಿಯಷ್ಟು ಚಿಕ್ಕ, ಬೆಕ್ಕಿನಷ್ಟು ದೊಡ್ಡ ಅಳಿಲನ್ನು ನೋಡಬಹುದು. ಸಮಾನ್ಯವಾಗಿ ನೆಲದ ಅಳಿಲುಗಳು ಮತು ಮರದ ಅಳಿಲುಗಳು ಎಂದು ಎರಡು ಬಗೆಯ ಅಳಿಲುಗಳಿವೆ. ಮರದಿಂದ ಮರಕ್ಕೆ ನೆಗೆಯುವ ಅಳಿಲುಗಳನ್ನು ಆಸ್ಟ್ರೇಲಿಯಾ ಹೊರತುಪಡಿಸಿ ಎಲ್ಲಾ ದೇಶಗಳಲ್ಲಿಯೂ ನೋಡಬಹುದು.
ಕಳ್ಳ ಕಾಗೆಗಳು
ಕಪ್ಪಾದ ಒರಟು ರೆಕ್ಕೆಗಳ ಕಾಗೆಗಳು ಕಳ್ಳತನದಲ್ಲಿ ಎತ್ತಿದ ಕೈ. ಯಾರೂ ಇಲ್ಲದಾಗ ಇಣುಕುವ ಕಾಗೆಗಳು ಕ್ಷಣ ಮಾತ್ರದಲ್ಲಿ ತನಗೆ ಬೇಕಾದ ವಸ್ತುಗಳನ್ನು ಕದ್ದು ಪರಾರಿಯಾಗುತ್ತವೆ. ಪಕ್ಷಿಗಳ ಗೂಡುಗಳಿಂದ ಮೊಟ್ಟೆಗಳನ್ನು ಅಷ್ಟೇ ಅಲ್ಲ, ಮರಿಗಳನ್ನು ಎತ್ತಿಕೊಂಡು ಹೋಗುವ ಕಾಗೆಗಳನ್ನು ರೈತರ ಶತ್ರು ಎಂದೂ ಪರಿಗಣಿಸಲಾಗುತ್ತದೆ. ಹೊಲಗಳಲ್ಲಿ ಕಾಳು ಮತ್ತು ಬೆಳೆಗಳನ್ನು ತಿಂದು ರೈತರಿಗೆ ಕಾಟ ಕೊಡುವ ಅವು ಕೊಳೆತ ಪ್ರಾಣಿ, ಪಕ್ಷಿಗಳನ್ನು ತಿಂದು ನಿಸರ್ಗವನ್ನು ಸ್ವಚ್ಛ ಕೂಡ ಮಾಡುತ್ತದೆ. ಸಾಮಾನ್ಯವಾಗಿ ಕಾಗೆಗಳು ವಲಸೆ ಹೋಗುವುದಿಲ್ಲ. ಕೆಲವು ಕಾಗೆಗಳು ಚಳಿಗಾಲದಲ್ಲಿ ದಕ್ಷಿಣ ದಿಕ್ಕಿಗೆ ಹೋಗುತ್ತವೆ. ಅವುಗಳ ದೃಷ್ಟಿ ಮತ್ತು ಶ್ರವಣ ತುಂಬಾ ಸೂಕ್ಷ್ಮವಾಗಿರುತ್ತದೆ. ಒಗ್ಗಟ್ಟಿಗೆ ಮತ್ತೊಂದು ಹೆಸರು ಎಂದು ಕಾಗೆ ಬಳಗವನ್ನು ಕರೆಯಲಾಗುತ್ತದೆ. ಅಷ್ಟೇ ಅಲ್ಲ ಅವು ಅಪಾಯವನ್ನು ಬಹುಬೇಗ ಗುರುತಿಸುತ್ತವೆ.
ಸಮುದ್ರ ಕುದುರೆ
ಇದು ಸಮುದ್ರ ಕುದುರೆ. ಕುದುರೆಯನ್ನು ಹೋಲುವ ಮುಖ ಮತ್ತು ಕತ್ತಿನ ಭಾಗ ಹೊಂದಿರುವ ಇದು ಸಾಗರ ಜೀವಿ. ಉಷ್ಣ ಮತ್ತು ಸಮಶೀತೋಷ್ಣ ಹವೆ ಇರುವ ಸಮುದ್ರಗಳಲ್ಲಿ ಕಂಡು ಬರುವ ಇದು ಮೀನಿನ ಜಾತಿಗೆ ಸೇರಿದೆ. ಇದರ ದೇಹ ಒರಟಾಗಿರುತ್ತದೆ. ಬಾಲ ಹಾವಿನ ಬಾಲವನ್ನು ಹೋಲುತ್ತದೆ. ಬೆನ್ನಿನ ಮೇಲೆ ಇರುವ ಒಂದೇ ಒಂದು ರೆಕ್ಕೆಯಿಂದ ಇದು ಈಜಬಲ್ಲದು. ಇವು ಕಡಲಲ್ಲಿರುವ ಕಳೆಗಳಿಗೆ ತಮ್ಮ ಬಾಲವನ್ನು ಸುತ್ತಿಕೊಂಡು ವಿಶ್ರಾಂತಿ ಪಡೆಯುತ್ತವೆ. ಕಂದು, ಹಳದಿ ಬಣ್ಣಗಳಲ್ಲಿ ಕಾಣಸಿಗುವ ಈ ಸಮುದ್ರ ಕುದುರೆಗಳು ತಮ್ಮ ಮರಿಗಳನ್ನು ತುಂಬಾ ಕಾಳಜಿಯಿಂದ ಕಾಪಾಡುತ್ತವೆ. ಹೆಣ್ಣು ತಾನು ಹೆತ್ತ ಮೊಟ್ಟೆಗಳನ್ನು ಗಂಡಿನ ಬಾಲದ ಬಳಿ ಇರುವ ಚೀಲದಲ್ಲಿ ಹಾಕುತ್ತದೆ. ಅಲ್ಲಿನ ಶಾಖಕ್ಕೆ ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ. ಸಾಮಾನ್ಯವಾಗಿ ಸಮುದ್ರ ಕುದುರೆಗಳು ಮೀನಿನ ಮೊಟ್ಟೆ ಮತ್ತು ಸಣ್ಣಪುಟ್ಟ ಪ್ರಾಣಿಗಳನ್ನು ತಿನ್ನುತ್ತವೆ. ಸತ್ತ ಪ್ರಾಣಿಗಳನ್ನು ಅವು ತಿನ್ನುವುದಿಲ್ಲ. ಸಮುದ್ರ ತಳದಲ್ಲಿ 50 ವಿಧದ ಸಮುದ್ರ ಕುದುರೆಗಳಿವೆ. ಅವು 5ರಿಂದ 30 ಸೆಂಟಿಮೀಟರ್ ಉದ್ದ ಇರುತ್ತವೆ. ಬೇಸಿಗೆ ಕಾಲದಲ್ಲಿ ಅವುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಅವು ನೋಡಲು ಒರಟಾಗಿರುವ ಕಾರಣ ಮೀನು ಹಾಗೂ ಪ್ರಾಣಿಗಳು ಅವುಗಳನ್ನು ತಿನ್ನಲು ಬಯಸುವುದಿಲ್ಲ. ಅದರಿಂದಲೇ ಅವು ಸುರಕ್ಷಿತ ಜೀವಿಗಳು.
ಜಗತ್ತಿನಾದ್ಯಂತ ನೌಕಾಯಾನ ಮಾಡಿದ ಮೊದಲ ಮಹಿಳೆ ಯಾರು? ನ್ಯೂಜಿಲ್ಯಾಂಡ್ನ ನ್ಯೊಮಿ ಜೇಮ್ಸ ಎಂಬ 28 ವರ್ಷದ ಮಹಿಳೆ ಮೊದಲ ಬಾರಿಗೆ ಸೆಪ್ಟೆಂಬರ್ 1977ರಲ್ಲಿ ಜಗತ್ತಿನಾದ್ಯಂತ ನೌಕಾಯಾನ ಕೈಗೊಂಡಳು. 48 ಸಾವಿರ ಕಿ.ಮೀ.ಗಳ ಆ ಪ್ರಯಾಣ ಅತ್ಯಂತ ರೋಚಕತೆಯಿಂದ ಕೂಡಿತ್ತು. ಜೂನ್ 1978ರಲ್ಲಿ ನ್ಯೊಮಿ ಜೇಮ್ಸಳ ನೌಕಾಯಾನ ಯಶಸ್ವಿಯಾಗಿ ಪೂರ್ಣಗೊಂಡಿತು.
ಸ್ಟೆಥೊಸ್ಕೋಪ್ ಕಂಡುಹಿಡಿದವರು ಯಾರು? ಫ್ರೆಂಚ್ ವೈದ್ಯ ರೆನೆ ಥ್ಲಿಯೊಪಿಯೆ ಲಾಯೆನ್ನೆ ( Rene Theoplhie Laennec ) 1816ರಲ್ಲಿ ಸ್ಟೆಥೊಸ್ಕೋಪ್ ಕಂಡುಹಿಡಿದರು. ಆದರೆ 19ನೇ ಶತಮಾನದ ವೇಳೆಗೆ ಸುಧಾರಿತ ಸ್ಟೆಥೊಸ್ಕೋಪನ್ನು ತಯಾರಿಸಲಾಯಿತು.
ಪ್ರಪಂಚದಲ್ಲಿ ಅತ್ಯಂತ ದೊಡ್ಡ ದೇವಾಲಯ ಯಾವುದು? 1999ರಲ್ಲಿ ಗಿನ್ನೆಸ್ ಪುಸ್ತಕದಲ್ಲಿ ದಾಖಲಾದ ಪ್ರಕಾರ ಕ್ಯಾಂಬೊಡಿಯಾದ ‘ಅಂಕೋರ್ ವಾಟ್’ (ಸಿಟಿ ಟೆಂಪಲ್) ಪ್ರಪಂಚದಲ್ಲಿ ಅತ್ಯಂತ ದೊಡ್ಡ ದೇವಾಲಯ ಎನ್ನುವ ಕೀರ್ತಿ ಹೊತ್ತಿದೆ. 402 ಎಕರೆ ಪ್ರದೇಶದಲ್ಲಿ ಚಾಚಿಕೊಂಡಿರುವ ದೇವಾಲಯದಲ್ಲಿ ಸುಮಾರು 72 ಮಹತ್ವದ ಸ್ಮಾರಕಗಳಿವೆ.