ಇಂಥವರಿದ್ದರೆ ಗೇಮ್ಗೆ ಶೇಮ್ ಅಲ್ಲದೆ ಮತ್ತಿನ್ನೇನು ಬಂದೀತು?
Don’t live in past!
ನಮ್ಮ ಭಾರತೀಯ ಹಾಕಿಯ ಹಾಲಿ ಸ್ಥಿತಿಗತಿಯನ್ನು ನೋಡಿ ಹೀಗೆ ಹೇಳುವವರು ಸಾಕಷ್ಟಿದ್ದಾರೆ. Cricket has become a religion in India, ಕ್ರಿಕೆಟ್ ಅನ್ನೇ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯನ್ನಾಗಿ ಏಕೆ ಘೋಷಿಸ ಬಾರದು? ಎಂದು ವಾದಿಸುವವರಿಗೂ ಕಡಿಮೆಯಿಲ್ಲ. Should Cricket be made National game? ಎಂಬ ಚರ್ಚೆ, ಸಮೀಕ್ಷೆಗಳೂ ನಡೆದಿವೆ.
ಎಲ್ಲಾ ಸರಿ…
But what kind of past both Cricket and Hockey have?
ಗತಕಾಲದಲ್ಲಿ ಬದುಕಬೇಡಿ ಎನ್ನುವ ಮೊದಲು ಇತಿಹಾಸವನ್ನೊಮ್ಮೆ ನೆನಪುಮಾಡಿಕೊಳ್ಳಿ…ಭಾರತ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು 1932ರಲ್ಲಿ. ಮೊದಲ ಜಯ (1952) ದಾಖಲಿಸಲು 20 ವರ್ಷಗಳೇ ಬೇಕಾದವು! ಅದಕ್ಕೂ ಮೊದಲು 25 ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿತ್ತು. ಇತ್ತ ಒಲಿಂಪಿಕ್ಸ್ ಹಾಕಿ ಪಂದ್ಯವೊಂದರಲ್ಲಿ ಭಾರತ “ಸೋಲಲು” 32 ವರ್ಷಗಳು ಬೇಕಾದವು! ಅದಕ್ಕೂ ಮೊದಲು ಒಲಿಂಪಿಕ್ಸ್ನಲ್ಲಿ ಸತತ 30 ಪಂದ್ಯಗಳಲ್ಲಿ ಭಾರತ ಜಯಗಳಿಸಿತ್ತು. ಹಾಕಿ ಮತ್ತು ಕ್ರಿಕೆಟ್ ಎರಡನ್ನೂ ಭಾರತಕ್ಕೆ ಪರಿಚಯಿಸಿದವರು ನಮ್ಮನ್ನಾಳಿದ ಬ್ರಿಟಿಷರು. ಅವರ ಇಂಗ್ಲೆಂಡನ್ನು ಮೊಟ್ಟಮೊದಲ ಬಾರಿಗೆ ಸೋಲಿಸಲು ಭಾರತೀಯ ಕ್ರಿಕೆಟ್ ತಂಡಕ್ಕೆ 20 ವರ್ಷ ಹಾಗೂ 15 ಪಂದ್ಯಗಳು(1952, ಚೆನ್ನೈನಲ್ಲಿ) ಬೇಕಾದವು. ಅದೇ ಇಂಗ್ಲೆಂಡ್ ಹಾಕಿಯಲ್ಲಿ ಭಾರತವನ್ನು ಸೋಲಿಸಲು 37 ವರ್ಷ ಹಾಗೂ 22 ಪಂದ್ಯಗಳನ್ನು ತೆಗೆದುಕೊಂಡಿತು! ಮೊದಲ ಬಾರಿಗೆ ಭಾರತ ಇಂಗ್ಲೆಂಡ್ಗೆ ಸೋತಿದ್ದು 1985ರಲ್ಲಿ! ಭಾರತವನ್ನಾಳುತ್ತಿರುವವರೆಗೂ ಬ್ರಿಟಿಷರು ನಮ್ಮ ಹಾಕಿ ತಂಡದ ಜತೆ ಪಂದ್ಯವನ್ನಾಡಿರಲಿಲ್ಲ! ಏಷ್ಯಾ ಖಂಡದಲ್ಲಿಯೇ ಮೊಟ್ಟಮೊದಲ ಒಲಿಂಪಿಕ್ಸ್ ಗೋಲ್ಡ್ ಮೆಡಲ್ ಗೆದ್ದಿದ್ದು (1928ರಲ್ಲಿ) ನಮ್ಮ ಭಾರತದ ಹಾಕಿ ತಂಡ!! ಭಾರತ ಸ್ವತಂತ್ರಗೊಂಡ ನಂತರ ಕ್ರೀಡಾ ಕ್ಷೇತ್ರದಲ್ಲಿ ದೇಶ ತೋರಿದ ಮೊದಲ ಸಾಧನೆಯೆಂದರೆ ೧೯೪೮ರ ಒಲಿಂಪಿಕ್ಸ್ ಹಾಕಿ ಗೋಲ್ಡ್ ಮೆಡಲ್! ಒಲಿಂಪಿಕ್ ಕ್ರೀಡಾಕೂಟವೊಂದರಲ್ಲಿ ಮೊದಲಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ರಾಷ್ಟ್ರಗೀತೆ ಜನಗಣಮನವನ್ನು ಹಾಡಿದ್ದೂ ಆ ಸಂದರ್ಭದಲ್ಲೇ. ಇದುವರೆಗೂ ಭಾರತ ೮ ಬಾರಿ ಒಲಿಂಪಿಕ್ಸ್ ಹಾಕಿಯಲ್ಲಿ ಚಿನ್ನದ ಪದಕ ಗೆದ್ದಿದೆ. ಫೈನಲ್ ಪಂದ್ಯವೊಂದರಲ್ಲಿ ಅತಿಹೆಚ್ಚು ಗೋಲುಗಳ ಅಂತರದಿಂದ ಸೋಲಿಸಿರುವ ದಾಖಲೆಯೂ ಭಾರತದ್ದಾಗಿದೆ. 1936ರ ಒಲಿಂಪಿಕ್ಸ್ ಫೈನಲ್ನಲ್ಲಿ ಜರ್ಮನಿಯನ್ನು 8-1ರ ಅಂತರದಿಂದ ಸೋಲಿಸಿತ್ತು, ಲೀಗ್ ಪಂದ್ಯದಲ್ಲೂ ಅತಿ ದೊಡ್ಡ ಜಯ ದಾಖಲಿಸಿದ ಹೆಗ್ಗಳಿಕೆ ಇಂದಿಗೂ ಭಾರತದ ಹೆಸರಲ್ಲೇ ಇದೆ. 1932ರ ಒಲಿಂಪಿಕ್ಸ್ನಲ್ಲಿ 32-0 ಅಂತರದಿಂದ ಅಮೆರಿಕ ವನ್ನು ಸೋಲಿಸಿತ್ತು! ಅತಿ ಹೆಚ್ಚು ಸತತ ಜಯಗಳೂ ಭಾರತದ್ದೇ ಆಗಿವೆ. 1928ರಿಂದ 1960ರವರೆಗೂ ಸತತ 30 ಪಂದ್ಯಗಳಲ್ಲಿ ಭಾರತ ಜಯಿಸಿತ್ತು. ಭಾರತ ಎಷ್ಟು ಬಲಿಷ್ಠ ತಂಡವಾಗಿತ್ತೆಂದರೆ ಪಂದ್ಯ ವೊಂದರಲ್ಲಿ ಕೇವಲ ಒಂದೇ ಒಂದು ಗೋಲು ಹೊಡೆದಿದ್ದು 28 ವರ್ಷಗಳ ನಂತರ! 1956ರ ಒಲಿಂಪಿಕ್ಸ್ ಸೆಮಿಫೈನಲ್ನಲ್ಲಿ ಭಾರತ ಜರ್ಮನಿಯನ್ನು ಸೋಲಿಸಿದ್ದು 1-0 ಗೋಲುಗಳ ಅಂತರದಿಂದ. ಅಷ್ಟು ಕಡಿಮೆ ಗೋಲುಗಳನ್ನು ಭಾರತ ಹಿಂದೆಂದೂ ಹೊಡೆದಿರಲಿಲ್ಲ.
ಹಾಗೂ….
ಭಾರತದ ವಿರುದ್ಧ ಒಂದಕ್ಕಿಂತ ಹೆಚ್ಚು ಗೋಲು ಹೊಡೆಯಲು ಇತರ ದೇಶಗಳಿಗೆ 40 ವರ್ಷಗಳು ಬೇಕಾದವು. 1968ರ ಒಲಿಂಪಿಕ್ಸ್ನಲ್ಲಿ 2-1ರ ಅಂತರದಿಂದ ನ್ಯೂಜಿಲೆಂಡ್ ನಮ್ಮನ್ನು ಸೋಲಿಸಿತ್ತು. ಹಾಕಿ ನಮ್ಮ ರಾಷ್ಟ್ರೀಯ ಕ್ರೀಡೆಯ ಸ್ಥಾನ ಪಡೆದುಕೊಂಡಿದ್ದು ಅದರ ಸಾಧನೆಯಿಂದಾಗಿಯೇ ಹೊರತು ಮತ್ತ್ಯಾವ ಕಾರಣಕ್ಕೂ ಅಲ್ಲ. ಮೂರು ಮತ್ತೊಂದು ತಂಡಗಳು ಆಡುತ್ತಿದ್ದ ಕ್ರಿಕೆಟ್ಟನ್ನು ಒಂದು ಕಾಲದಲ್ಲಿ ವೆಸ್ಟ್ಇಂಡೀಸ್ ಹೇಗೆ ಆಳಿತೋ, 100ಕ್ಕೂ ಹೆಚ್ಚು ರಾಷ್ಟ್ರಗಳು ಆಡುತ್ತಿದ್ದ ಹಾಕಿಯನ್ನು ಭಾರತ 40 ವರ್ಷ ಆಳಿತು!!
ಅಂತಹ ಭಾರತೀಯ ಹಾಕಿಯ ಸ್ಥಿತಿ ಇಂದು ಏನಾಗಿದೆ?
ಈ ಸ್ಥಿತಿಗೆ ಬಂದು ತಲುಪಿದ್ದಾದರೂ ಹೇಗೆ? ಒಬ್ಬ ರಣಜಿ ಕ್ರಿಕೆಟ್ ಆಡುವವನಿಗಿಂತಲೂ ಕಡಿಮೆ ಹಣಕ್ಕೆ ಅಂತಾರಾಷ್ಟ್ರೀಯ ಪಂದ್ಯ ಆಡುವ ಹಾಕಿ ಆಟಗಾರನ ಹೀನಾಯ ಸ್ಥಿತಿಗೆ ಕಾರಣ ಯಾರು? ಹಾಕಿ ನಮ್ಮ ರಕ್ತದಲ್ಲಿತ್ತು. ಹಾಕಿ ನಶಿಸಿದೆ ಅಂದರೆ ನಮ್ಮ ರಕ್ತವೇ ನಿಶ್ಶಕ್ತ ಗೊಂಡಿದೆಯೇ? ಅಥವಾ ಇಂಡಿಯನ್ ಹಾಕಿ ಫೆಡರೇಶನ್ ಹಾಗೂ ನಮ್ಮನ್ನಾಳುತ್ತಾ ಬಂದವರು ಹಾಕಿ ಪಾಲಿಗೆ ಎಚ್ಐವಿ ಸೋಂಕಾಗಿ ಪರಿಣಮಿಸಿದರೆ? ಆಸ್ಟ್ರೋಟರ್ಫ್ ಬಂದ ಮೇಲೆ ಡ್ರಿಬ್ಲಿಂಗ್ ಮರೆ ಯಾಗಿ ಭಾರತೀಯ ಉಪಖಂಡದ ಹಾಕಿ ನಶಿಸಿತು ಎನ್ನಬೇಡಿ. ಅದು ಶುದ್ಧ ಸುಳ್ಳು. ಹಾಗಾದರೆ ಪ್ರತಿಭೆಯನ್ನು, ಆ ಮೂಲಕ ಹಾಕಿಯನ್ನು ಕೊಂದವರಾರು?
ರಾಜೀವ್ ಮಿಶ್ರಾ!
ಬಹುಶಃ ಭಾರತೀಯ ಹಾಕಿ ಕಂಡ ಅತ್ಯಂತ ಸ್ಫುರದ್ರೂಪಿ ಯುವಕ ಆತ. ಆಸ್ಟ್ರೋಟರ್ಫ್ ಮೇಲೆ ಅವನನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿತ್ತು. ಉದ್ದ ಕೂದಲು, ಕೈಗಳೆರಡಕ್ಕೂ ರಿಸ್ಟ್ಬ್ಯಾಂಡ್, ಹಣೆಗೆ ಹಾರ್ಲೆ ಡೆವಿಡ್ ಸನ್ ಹೆಡ್ಬ್ಯಾಂಡ್ ಕಟ್ಟಿಕೊಂಡು ಮೈದಾನಕ್ಕಿಳಿದರೆ ರಾಕ್ ಸ್ಟಾರ್ ಥರಾ ಕಾಣುತ್ತಿದ್ದ. ಆ ಬಗ್ಗೆ ಕೇಳಿದರೆ ‘ಸ್ಟೈಲ್ ಮೇ ಸಬ್ಸೆ ಅಲಗ್ ದಿಖ್ನಾ ಚಾಹಿಯೆ’ ಎನ್ನುತ್ತಿದ್ದ. ನೋಡುವುದಕ್ಕಷ್ಟೇ ಅಲ್ಲ, ಸ್ಟಿಕ್ ಹಿಡಿದು ಮೈದಾನದಲ್ಲಿ ಓಡುತ್ತಿದ್ದರೆ ಆತನನ್ನು ಹಿಂಬಾಲಿಸಲು ನಮ್ಮ ಕಣ್ಣುಗಳೇ ಶ್ರಮಪಡಬೇಕಿತ್ತು. ಹೌದು, ಅವನು ಭಾರತ ಕಂಡ ಅತ್ಯಂತ ವೇಗದ ಸೆಂಟರ್ ಫಾರ್ವರ್ಡ್ ಆಟಗಾರ. ರಕ್ಷಣಾ ಆಟಗಾರರು ನೋಡನೋಡುತ್ತಿರುವಂತೆಯೇ ಮೈದಾನದ ‘D’ನೊಳಕ್ಕೆ ನುಗ್ಗಿ ಕಣ್ತಪ್ಪಿಸಿ ಗೋಲು ಹೊಡೆಯುತ್ತಿದ್ದ. ಭಾರತೀಯ ಆಟಗಾರರು ಆಸ್ಟ್ರೋಟರ್ಫ್ ಮೇಲೆ ಆಡಲು ಹೆಣಗುತ್ತಾರೆ ಎಂಬ ಆರೋಪ ದಟ್ಟವಾಗಿರುವ ಕಾಲದಲ್ಲೇ ಇಂಥದ್ದೊಂದು ಪ್ರತಿಭೆ ನಮ್ಮ ಜೂನಿಯರ್ ಹಾಕಿ ಟೀಮ್ ಮೂಲಕ ತನ್ನನ್ನು ಪ್ರಪಂಚಕ್ಕೆ ಪರಿಚಯ ಮಾಡಿಕೊಂಡಿತು.
ಅದು 1997ರ ಜೂನಿಯರ್ ಹಾಕಿ ವಿಶ್ವಕಪ್.
ಇಂಗ್ಲೆಂಡ್ನ ಮಿಲ್ಟನ್ ಕೀನ್ಸ್ನಲ್ಲಿ ಆಯೋಜನೆಯಾಗಿತ್ತು. ಸೀನಿಯರ್ ಆಟಗಾರರ ಮೇಲೆಯೇ ಇಲ್ಲದ ಭರವಸೆ ಇನ್ನು ನಮ್ಮ ಜೂನಿಯರ್ ಆಟಗಾರರ ಮೇಲಿದ್ದೀತೆ? ಜತೆಗೆ ಅಂತಹ ಹೇಳಿಕೊಳ್ಳುವ ಯುವ ಪ್ರತಿಭೆಗಳೂ ಇರಲಿಲ್ಲ. ಆದರೆ ವಿಶ್ವಕಪ್ ಪಂದ್ಯಗಳು ಪ್ರಾರಂಭವಾದ ನಂತರ ಭಾರತದ ಸಾಧನೆ ಎಲ್ಲರ ಗಮನ ಸೆಳೆಯಲಾರಂಭಿತು. ಆಸ್ಟ್ರೋಟರ್ಫ್ ಮೇಲೆ ಚಿರತೆಯಂತೆ ಓಡುತ್ತಿದ್ದ ರಾಜೀವ್ ಮಿಶ್ರಾನನ್ನು ಕಂಡು ಆಟಗಾರರೇ ನಿಬ್ಬೆರಗಾಗಲು ಆರಂಭಿಸಿದರು. ಹಾಲೆಂಡ್ನ ಕೋಚ್ ರೋಲ್ಯಾಂಡ್ ಆಲ್ತಮಸ್ ಅವರಂತೂ ಮೂರು ಕ್ಯಾಮೆರಾಗಳನ್ನು ಅಳವಡಿಸಿ ರಾಜೀವ್ ಮಿಶ್ರಾನ ಓಟವನ್ನು ಸೆರೆ ಹಿಡಿದರು. ಫೈನಲ್ನಲ್ಲಿ ಆಸ್ಟ್ರೇಲಿಯಾದ ಅನಿರೀಕ್ಷಿತ ಎದುರಾಳಿ ಭಾರತವಾಗಿತ್ತು! ಭಾರತ ಫೈನಲ್ ಸೋತು ೨ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೂ, ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಕೋಚ್ ಬ್ಯಾರಿ ಡ್ಯಾನ್ಸರ್ ರಾಜೀವ್ ಮಿಶ್ರಾನ ಆಟವನ್ನು ಕಂಡು ಅದೆಷ್ಟು ಇಂಪ್ರೆಸ್ ಆಗಿದ್ದರೆಂದರೆ “ಇನ್ನು ಹತ್ತು ವರ್ಷಗಳಲ್ಲಿ ಈತ ಜಗತ್ತಿನ ಅತ್ಯಂತ ಅಪಾಯಕಾರಿ ಫಾರ್ವರ್ಡ್ ಆಟಗಾರನೆನಿಸಲಿದ್ದಾನೆ” ಎಂದು ಮೆಚ್ಚುಗೆ ಸೂಚಿಸಿದರು. ಅಂದು ಭಾರತ ಫೈನಲ್ ತಲುಪಿದ್ದೇ ಮಿಶ್ರಾನಿಂದಾಗಿ. ಟೂರ್ನಿಯಲ್ಲಿ 9 ಗೋಲು ಹೊಡೆದಿದ್ದ ಆತನನ್ನು “ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್” ಎಂದು ಘೋಷಿಸಲಾಯಿತು. ಅದರ ಬೆನ್ನಲ್ಲೇ ಇಂಗ್ಲೆಂಡ್ನಲ್ಲೇ ನಡೆದ ‘ಹಾಕಿ ಗೋಲ್ಡ್ ಕಪ್’ ಹಾಗೂ ಪೋಲೆಂಡ್ನಲ್ಲಿ ನಡೆದ ೭ ರಾಷ್ಟ್ರಗಳ ಜೂನಿಯರ್ ಚಾಲೆಂಜ್ ಕಪ್ ಅನ್ನೂ ಗೆದ್ದುಕೊಂಡು ಬಂದರು. ಜರ್ಮನಿಯಲ್ಲಿ ನಡೆದ ಜೂನಿಯರ್ ಲೀಗ್ನಲ್ಲೂ ತವರು ತಂಡವನ್ನು ಹೀನಾಯವಾಗಿ ಸೋಲಿಸಿದರು. ಒಂದೊಂದು ಟೂರ್ನಿಗಳೂ ರಾಜೀವ್ ಮಿಶ್ರಾನ ಖ್ಯಾತಿಯನ್ನು ಹೆಚ್ಚಿಸುತ್ತಾ ಹೋದವು. ಮಿಶ್ರಾ ಭಾರತೀಯ ಹಾಕಿಯ ಪುನರುತ್ಥಾನದ ಸಂಕೇತದಂತೆ ಗೋಚರಿಸಲಾರಂಭಿಸಿದ.
ಇತ್ತ 1998ರಲ್ಲಿ ಸೀನಿಯರ್ ಹಾಕಿ ವರ್ಲ್ಡ್ ಕಪ್ ನಡೆಯಲಿತ್ತು. ಪಾಕಿಸ್ತಾನದ ಖ್ಯಾತ ಹಾಕಿ ತಾರೆ ಹಸನ್ ಸರ್ದಾರ್ ಥರಾ ಚೆಂಡು ಸಿಕ್ಕ ಕೂಡಲೇ ಮಿಂಚಿನ ವೇಗದಲ್ಲಿ ‘ಡಿ’ನತ್ತ ಸಾಗುವ, ಗೋಲು ಬಾರಿಸುವ ಪರಿಯಿಂದಾಗಿ ರಾಜೀವ್ ಮಿಶ್ರಾನಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿತು. ಇನ್ನು ಮಿಶ್ರಾ ಹಾಗೂ ಧನರಾಜ್ ಪಿಳ್ಳೈ ಜೋಡಿಯಂತೂ ಭಾರತಕ್ಕೆ ವಿಶ್ವಕಪ್ ತಂದುಕೊಡುವುದು ಗ್ಯಾರಂಟಿ ಎಂಬ ಭರವಸೆ ಸೃಷ್ಟಿಸಿತು. ಅಷ್ಟಕ್ಕೂ ಪಾದರಸದಂತೆ ಸಾಗುತ್ತಿದ್ದ ಧನರಾಜ್ ಪಿಳ್ಳೈ ಸ್ಟಿಕ್ಗೆ ಬಾಲು ಸಿಕ್ಕಿತೆಂದರೆ ಕನಿಷ್ಠ ಮೂರ್ನಾಲ್ಕು ರಕ್ಷಣಾ ಆಟಗಾರರು ಆತನತ್ತ ಓಡುತ್ತಾರೆ, ಆಗ ಚೆಂಡನ್ನು ರಾಜೀವ್ ಮಿಶ್ರಾನಿಗೆ ಪಾಸ್ ಮಾಡಿದರೆ ಗೋಲು ಗ್ಯಾರಂಟಿ ಎನಿಸಿತು. ಇಂತಹ ಭರವಸೆ ಮೂಡಿಸಿದಾಗ ಆತನಿಗೆ ಕೇವಲ 17 ವರ್ಷ ವಯಸ್ಸು!!
ವಿಶ್ವಕಪ್ಗೂ ಮೊದಲು, ಅಂದರೆ ೧೯೯೮ರ ಜನವರಿ-ಫೆಬ್ರವರಿ ಯಲ್ಲಿ ಪಾಕಿಸ್ತಾನ-ಭಾರತ ಹಾಕಿ ಸರಣಿ ಆರಂಭವಾಯಿತು. ಎಡ ಮಂಡಿಗೆ ಪೆಟ್ಟು ತಿಂದ ಮಿಶ್ರಾನಿಗೆ ತೀವ್ರ ನೋವು ಕಾಣಿಸ ಲಾರಂಭಿಸಿತು. ತಂಡದ ಸಹ ಆಟಗಾರರು, ಬೆಂಬಲಿಗರ ಪ್ರೋತ್ಸಾಹದಿಂದಾಗಿ ಗಾಯದ ನಡುವೆಯೂ ಆಟ ಮುಂದುವರಿಸಿದ. ಮೇನಲ್ಲಿ ವಿಶ್ವಕಪ್. ಗಾಯದ ನಡುವೆಯೂ ತಂಡಕ್ಕೆ ಆಯ್ಕೆಯಾದ. ಆದರೆ ಒಂದೇ ಒಂದು ಪಂದ್ಯವನ್ನೂ ಆಡಲಾಗಲಿಲ್ಲ. ಭಾರತಕ್ಕೆ ವಾಪಸ್ ಬಂದ ಮೇಲೆ, ಚಿಕಿತ್ಸೆ ಕೊಡಿಸಿ ಎಂದು ಕೇಳಿದರೆ, “ನೀನೇ ಚಿಕಿತ್ಸೆ ತೆಗೆದುಕೊ, ನಂತರ ಬಿಲ್ ಕೊಡು’ ಎಂದರು ಇಂಡಿಯನ್ ಹಾಕಿ ಫೆಡರೇಶನ್ ಅಧ್ಯಕ್ಷ ಕೆ.ಪಿ.ಎಸ್. ಗಿಲ್ ಸಾಹೇಬರು! ಒಬ್ಬ ಆಟಗಾರನಿಗೆ ಯಾವ ವೈದ್ಯರ ಬಳಿ ಹೋಗಬೇಕು ಎಂದು ಹೇಗೆ ಗೊತ್ತಿರುತ್ತದೆ ಹೇಳಿ? ಆತನಿಗೆ ಸೂಕ್ತ ಸಲಹೆ ನೀಡಬೇಕಾದುದು ಹಾಕಿ ಮಂಡಳಿಯ ಕರ್ತವ್ಯವಲ್ಲವೆ? ಸಚಿನ್ ತೆಂಡೂಲ್ಕರ್ನಂಥ ಅತಿ ಶ್ರೀಮಂತ ಕ್ರಿಕೆಟಿಗನ ವೈದ್ಯಕೀಯ ವೆಚ್ಚವನ್ನು ಬಿಸಿಸಿಐ ಭರಿಸುತ್ತದೆ, ಕುಂಬ್ಳೆ, ಶ್ರೀನಾಥ್ರನ್ನು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಿ ಚಿಕಿತ್ಸೆ ಕೊಡಿಸುತ್ತದೆ. ಆದರೆ ರಾಜೀವ್ ಮಿಶ್ರಾನನ್ನು ಹಾಕಿ ಮಂಡಳಿ ನಡೆಸಿಕೊಂಡಿದ್ದು ಹೇಗೆ?
ಸ್ವದೇಶಕ್ಕೆ ವಾಪಸ್ಸಾದ ಮೇಲೆ ದಿಲ್ಲಿಯ ವೈದ್ಯನೊಬ್ಬ ಮಂಡಿಯ ಶಸ್ತ್ರಚಿಕಿತ್ಸೆ ನಡೆಸಿದ. ಯಶಸ್ವಿಯಾಗಿ ಆಪರೇಟ್ ಮಾಡಿದ್ದೇನೆ ಎಂದು ಪ್ರತಿಪಾದಿಸಿದ. ಆದರೆ ನೋವು ಮರೆಯಾಗಲಿಲ್ಲ. ಬೆಂಗಳೂರಿನಲ್ಲಿರುವ ‘ಸಾಯಿ’ಗೆ ತೆರಳು (SAI) ಎಂದರು, ಜಂಜಾಟದಲ್ಲಿ ರಾಜೀವ್ ಮಿಶ್ರಾನ ಕ್ರೀಡಾ ಬದುಕೇ ಸತ್ತುಹೋಯಿತು. ಶಸ್ತ್ರಚಿಕಿತ್ಸೆ ವೇಳೆ ಎಸಗಿದ ತಪ್ಪು ಹಾಗೂ ಸೂಕ್ತ ಚಿಕಿತ್ಸೆಯ ಕೊರತೆಯಿಂದಾಗಿ ರಾಜೀವ್ ಮಿಶ್ರಾನ ಕ್ರೀಡಾ ಬದುಕೇ ಮೊಟಕುಗೊಂಡಿತು. ಯಾವ ಕ್ರೀಡೆಯನ್ನು ಎದೆಗಪ್ಪಿಕೊಂಡಿದ್ದನೋ ಅಂತಹ ಕ್ರೀಡೆಯ ಬಗ್ಗೆ ಇಂದು ಆತನ ಎದೆತುಂಬ ನೋವು, ಹತಾಶೆಗಳೇ ತುಂಬಿವೆ. ಉತ್ತರ ರೈಲ್ವೆ ಆತನಿಗೆ ನೀಡಿದ್ದ ಕೆಲಸವೇ ಇಂದು ಹೊಟ್ಟೆಹೊರೆಯುವ ಮಾರ್ಗವಾಗಿದೆ. ವಾರಾಣಸಿಯ ರೈಲ್ವೆ ಸ್ಟೇಶನ್ನಲ್ಲಿ ಟಿಕೆಟ್ ಚೆಕಿಂಗ್ ಕೆಲಸ ಮಾಡುತ್ತಿದ್ದಾನೆ. ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ವರದಿಗಾರರೊಬ್ಬರು ೨೦೦೪ರಲ್ಲಿ ಆತನನ್ನು ಪತ್ತೆ ಹಚ್ಚಿ ರಾಷ್ಟ್ರದ ಗಮನ ಸೆಳೆದರಾದರೂ ಅಷ್ಟರೊಳಗೆ ಕಾಲಮಿಂಚಿತ್ತು.
ನೀವೇ ಹೇಳಿ, ‘ಆಸ್ಟ್ರೋಟರ್ಫ್ ಮೇಲಿನ ತೆಂಡೂಲ್ಕರ್’ ಎಂದು ಹೆಸರು ಮಾಡಿದ್ದ ರಾಜೀವ್ ಮಿಶ್ರಾನ ಕ್ರೀಡಾ ಬದುಕನ್ನು ಕೊಂದಿದ್ದಾರು? ಆತನ ಆಸ್ಪತ್ರೆ ಖರ್ಚನ್ನು ಇದುವರೆಗೂ ಮರು ಪಾವತಿ ಮಾಡಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ತಮ್ಮ ಯೋಗಕ್ಷೇಮ ನೋಡಿಕೊಳ್ಳಬೇಕಾದುದು ಆಟಗಾರರ ವೈಯಕ್ತಿಕ ಕರ್ತವ್ಯ ಎಂದಿದ್ದರು ಕೆ.ಪಿ.ಎಸ್. ಗಿಲ್! ಮತ್ತೊಬ್ಬ ಬಲ್ಜಿತ್ ಸಿಂಗ್ ಎಂಬ ನಮ್ಮ ಗೋಲ್ ಕೀಪರ್ ಕಣ್ಣಿಗೆ ಬಾಲು ಬಡಿದು ದೃಷ್ಟಿಯೇ ಹೊರಟು ಹೋಗುವ ಅಪಾಯ ಎದುರಾದಾಗ ಸಂಪೂರ್ಣ ವೆಚ್ಚವನ್ನು ಭರಿಸುತ್ತೇವೆ, ಚಿಕಿತ್ಸೆ ತೆಗೆದುಕೊ ಎಂದು ಇದೇ ಕೆ.ಪಿ.ಎಸ್. ಗಿಲ್ ಭರವಸೆ ನೀಡಿದ್ದರು. ಆತ ಅಮೆರಿಕಕ್ಕೆ ಹೋಗಿ ಮೊದಲ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ. ದೃಷ್ಟಿ ಸಂಪೂರ್ಣವಾಗಿ ಬರಬೇಕೆಂದರೆ ಎರಡನೇ ಆಪರೇಶನ್ ಆಗಬೇಕು ಎಂದರು. ಇನ್ನೇನು 2ನೇ ಆಪರೇಶನ್ಗೆ ಒಳಗಾಗಬೇಕು ಅಷ್ಟರಲ್ಲಿ ಕೇಂದ್ರ ಕ್ರೀಡಾ ಖಾತೆ ಅಧಿಕಾರಿಗಳು ಕರೆ ಮಾಡಿ, ವಾಪಸ್ ಬರುವಂತೆ ಸೂಚಿಸಿದರು! ಮೊನ್ನೆ ಗುರುವಾರ(ಜ.14) ಮಾಧ್ಯಮಗಳ ಮುಂದೆ ಬಲ್ಜಿತ್ ಸಿಂಗ್ ತಮ್ಮ ನೋವು, ಹತಾಶೆ ತೋಡಿಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಯಾರು? ಆ ಮೂರ್ಖ ಶಿಖಾಮಣಿ ಕೆ.ಪಿ.ಎಸ್. ಗಿಲ್ ಇವತ್ತು ಹಾಕಿ ಮಂಡಳಿಯಲ್ಲಿಲ್ಲದಿದ್ದರೇನಂತೆ ‘ಹಾಕಿ ಇಂಡಿಯಾ’ದ ಉಸ್ತುವಾರಿ ಹೊತ್ತಿರುವ ಇಂಡಿಯನ್ ಒಲಿಂಪಿಕ್ಸ್ ಆಸೋಶಿಯೇಷನ್ ಅಧ್ಯಕ್ಷ ಸುರೇಶ್ ಕಲ್ಮಾಡಿ ಹಾಗೂ ಕೇಂದ್ರ ಕ್ರೀಡಾ ಸಚಿವ ಎಂ.ಎಸ್. ಗಿಲ್ ಹಳೇ ಪರಂಪರೆಯನ್ನೇ ಮುಂದುವರಿಸುತ್ತಿದ್ದಾರೆ. ಈ ಎಂ.ಎಸ್. ಗಿಲ್ ಇದ್ದಾರಲ್ಲಾ ಈತ ಎಂತಹ ವಿಕ್ಷಿಪ್ತ ಮನುಷ್ಯನೆಂದರೆ, ವಿನಾಕಾರಣ ಬಿಸಿಸಿಐ ವಿಚಾರದಲ್ಲಿ ಮೂಗು ತೂರಿಸುತ್ತಾರೆ, ಅಗತ್ಯವಿಲ್ಲದಿದ್ದರೂ ಕ್ರಿಕೆಟ್ ನಿರ್ವಹಣೆ ಬಗ್ಗೆ ಟೀಕೆ ಮಾಡುತ್ತಾರೆ. ಹಾಗೆಲ್ಲ ಅಧಿಕಪ್ರಸಂಗತನ ತೋರುವ ಗಿಲ್ಗೆ ಹಾಕಿ ಆಟಗಾರರ ಪ್ರಾಮಾಣಿಕ ಬೇಡಿಕೆಗಳ ಬಗ್ಗೆಯೇಕೆ ಕಾಳಜಿಯಿಲ್ಲ? ಇಷ್ಟೆಲ್ಲಾ ರಂಪ ನಡೆದರೂ ಮಾತು ಬಾರದ ಮೂಕನಂತೆ ಏಕೆ ಕುಳಿತುಕೊಂಡಿದ್ದಾರೆ? ಆಟಗಾರರು ಪಂದ್ಯ ಶುಲ್ಕಕ್ಕಾಗಿ ಬೇಡುವಂತೆ ಮಾಡುವ ಮೂಲಕ ಹಾಕಿಗೆ ಕಳಂಕ ತರುತ್ತಿರುವುದು ಯಾರು? ಬಾಕಿ ಕೊಡುವವರೆಗೂ ವಿಶ್ವಕಪ್ ಪೂರ್ವಭಾವಿ ತರಬೇತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಧರಣಿ ನಡೆಸಿದ ನಮ್ಮ ಹಾಕಿ ಆಟಗಾರರು ಮೊನ್ನೆ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿರುವಾಗ, ‘ನಿಮಗೆ ದೇಶ ಮುಖ್ಯವೋ, ದುಡ್ಡು ಮುಖ್ಯವೋ’ ಎಂದು ಪತ್ರಕರ್ತರು ಬುದ್ಧಿಗೇಡಿಗಳಂತೆ ಕೇಳುತ್ತಿದ್ದುದನ್ನು ಕಂಡರೆ ಕೋಪ ನೆತ್ತಿಗೇರುವುದಿಲ್ಲವೆ? ಹಾಕಿ ನಮ್ಮ ನ್ಯಾಷನಲ್ ಗೇಮ್, ಅದು ನ್ಯಾಷನಲ್ ಶೇಮ್ ಆಗಬಾರದು ಎಂದು ಕಲ್ಮಾಡಿ ಬುಧವಾರ ನಡೆಸಿದ ಪ್ರತಿಕಾಗೋಷ್ಠಿಯಲ್ಲಿ ಹೇಳುತ್ತಿದ್ದರು. ಕಲ್ಮಾಡಿ, ಕೆ.ಪಿ.ಎಸ್. ಗಿಲ್, ಎಂ.ಎಸ್. ಗಿಲ್ ಅವರಂತಹವರು ಇರುವವರೆಗೂ ಗೇಮ್ಗೆ ಶೇಮ್ ಅಲ್ಲದೆ ಮತ್ತಿನ್ನೇನು ಬರಲು ಸಾಧ್ಯ? ಧನ್ರಾಜ್ ಪಿಳ್ಳೈ, ಮುಖೇಶ್ ಕುಮಾರ್, ಆಶಿಷ್ ಬಲ್ಲಾಳ್, ಸುಬ್ಬಯ್ಯ ಅವರಂತಹ ಆಟಗಾರರನ್ನೇ ಸರಿಯಾಗಿ ನಡೆಸಿಕೊಳ್ಳದ, ರಾಜೀವ್ ಮಿಶ್ರಾನನ್ನು ಉಳಿಸಿಕೊಳ್ಳದ, ಗಗನ್ ಅಜಿತ್ ಸಿಂಗ್ನಂತಹ ಪ್ರತಿಭಾನ್ವಿತ ಯುವ ಆಟಗಾರರನ್ನು ಮೂಲೆಗುಂಪು ಮಾಡಿದ ಹಾಕಿ ಮಂಡಳಿಯಿಂದ ಈ ದೇಶಕ್ಕೇನಾದರೂ ಬರುವುದಾದರೆ ಅದು ಶೆಮ್ ಮಾತ್ರ.
ಇಪ್ಪತ್ತೊಂದನೇ ಶತಮಾನದಲ್ಲಿ ಚೀನಾಕ್ಕೆ ಸರಿಸಮನಾಗಿ ನಿಲ್ಲುವ ಮಾತನಾಡುತ್ತಿದ್ದೇವೆ. ಒಲಿಂಪಿಕ್ಸ್ನಲ್ಲಿ ಅತಿ ಹೆಚ್ಚು ಚಿನ್ನದ ಪದಕ ಗಳಿಸಿರುವ ಚೀನಾದ ಜತೆ ಸೆಣಸುತ್ತೇವೆ ಎಂದು ಹೇಳಿಕೊಳ್ಳುವುದಕ್ಕೂ ಭಾರತೀಯರಾದ ನಾವು ನಾಚಿಕೆಪಟ್ಟುಕೊಳ್ಳಬೇಕು. ಒಂದು ರಾಷ್ಟ್ರೀಯ ಕ್ರೀಡೆಯೆಂದರೆ ಅದರ ಜತೆ ನಾವು ಭಾವನಾತ್ಮಕ ಸಂಬಂಧ ಹೊಂದಿರಬೇಕು, ಅದು ಆ ರಾಷ್ಟ್ರದ ಆಶಯದ ಪ್ರತೀಕವಾಗಿರಬೇಕು. ಇವತ್ತು ಹಾಕಿ ಅದನ್ನೆಲ್ಲಾ ಕಳೆದುಕೊಂಡಿದ್ದರೆ ಅದಕ್ಕೆ ಆಟಗಾರರು ಕಾರಣರಲ್ಲ, ಪ್ರತಿಭೆಯ ಕೊರತೆಯೂ ಅಲ್ಲ, ಕ್ರೀಡಾ ಮಂಡಳಿಗಳನ್ನು ಆಳುತ್ತಿರುವ ನಾಲಾಯಕ್ಗಳು. ಪಂದ್ಯ ಶುಲ್ಕ ನೀಡಿ ಎಂದು ಆಟಗಾರರು ಬೇಡುವ ಪರಿಸ್ಥಿತಿ ಇರುವಾಗ ರಾಜೀವ್ ಮಿಶ್ರಾ, ಗಗನ್ ಅಜಿತ್ ಸಿಂಗ್, ಜುಗ್ರಾಜ್ ಸಿಂಗ್, ವೀರೇನ್ ರಸ್ಕಿನಾರಂತಹ ಎಷ್ಟೇ ಪ್ರತಿಭೆಗಳು ಬಂದರೂ ಯಾವ ಪ್ರಯೋಜನ?
It’s national shame!

No comments:
Post a Comment